ಗೆಳೆಯರ ಬಳಗದ ಸೇವಾ ಕಾರ್ಯ. ಉಳ್ಳವರು ಮತ್ತು ಬಡವರ ಮಧ್ಯೆ ಸೇತುವೆಯ ಕೆಲಸ : ನಾರನಗೌಡ ಉತ್ತಂಗಿ

ಮಹಾಲಿಂಗಪುರ : ಕೊರೋನಾ ಕರ್ಮಕಾಂಡದಲ್ಲಿ ಸಿಕ್ಕಿ ಇಡೀ ಜಗತ್ತೇ ನಲುಗುತ್ತಿರುವಾಗ ಜನಸಾಮಾನ್ಯರು ತಲ್ಲಣಗೊಂಡಿದ್ದಾರೆ. ಇನ್ನು ಬಡವರು, ನಿರ್ಗತಿಕರ ಬವಣೆ ಹೇಳತೀರದು. ಈಗ ಅನಿವಾರ್ಯವಾಗಿ ವಿಧಿಸಿರುವ ಲಾಕ್ ಡೌನ್ ನಿಂದ ಆಹಾರ ಸಿಗದೇ ಹೊಸಪೇಟೆಯಲ್ಲಿ ನಿನ್ನೆ ಮೂರು ಜನ ಅಸುನೀಗಿದ ಘಟನೆ ನಡೆದಿರುವುದು ಜಗತ್ತಿನ ದೊಡ್ಡ ದುರಂತ.
ಕೊರೋನಾ ವಿಜ್ಞಾನ ಲೋಕಕ್ಕೆ ಸೆಡ್ಡು ಹೊಡೆದು ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿದೆ ಇಂಥ ಪರಿಸ್ಥಿತಿಯಲ್ಲಿ ಉಳ್ಳವರು ಮನೆಯಲ್ಲಿ ಸುಖವಾಗಿದ್ದರೆ ನಿರ್ಗತಿಕರು ದುಡಿಮೆ ಇಲ್ಲದೆ, ಊಟವೂ ಇಲ್ಲದೆ ಹಸಿವಿನಿಂದ ಸಾಯುತ್ತಿದ್ದಾರೆ. ಇಂಥ ಸಮಯದಲ್ಲಿ ಉಳ್ಳವರು ಮತ್ತು ನಿರ್ಗತಿಕರ ನಡುವೆ ಸೇತುವೆಯಾಗಿ ಕೆಲಸಮಾಡುವ ಸೇವಾ ಮನೋಭಾವವುಳ್ಳ ವ್ಯಕ್ತಿಗಳು ಶ್ರಮಿಸಿದಾಗ ಉಳ್ಳವರಿಂದ ಪಡೆದು ನಿರ್ಗತಿಕರಿಗೆ ನೀಡಿ ಅವರನ್ನು ಬದುಕಿಸಬಹುದೆಂಬ ಅತ್ಯಮೂಲ್ಯ ಕೆಲಸವನ್ನು ಮಹಾಲಿಂಗಪುರದ ಸಮಾನ ಮನಸ್ಕ ಗೆಳೆಯರ ಬಳಗ ಮಾಡಿದೆ, ಮೂಲಕ ನಾಡಿಗೆ ಮಾದರಿಯಾಗಿದೆ
ಸ್ಥಳೀಯ ಪತ್ರಕರ್ತರಾದ ಮೀರಾ ತಟಗಾರ, ಯೂನುಸ್ ಪಠಾಣ, ಶಿವಶಂಕರ ಕಡಬಲ್ಲವರ ಮತ್ತು ಮಹಾಲಿಂಗ ನಂದೆಪ್ಪನವರ, ಮನೋಜ ಮುಳ್ಳೂರ, ಮಾರುತಿ ಸಂಶಿ, ಪ್ರಕಾಶ ಢವಳೇಶ್ವರ, ರಾಜು ಲಾತೂರ ಇವರ ನೇತೃತ್ವದಲ್ಲಿ ಇಂತಹದೊoದು ಸಮಾಜ ಸೇವೆ ನಡೆದಿರುವುದು ಶ್ಲಾಘನೀಯ.
ನಿರ್ಗತಿಕರನ್ನು ಕಂಡು ಮರುಗಿ ನಗರದ ಸ್ಥಿತಿವಂತರನ್ನು ಕಂಡು ಅವರನ್ನು ಸಂಪರ್ಕಿಸಿ ಮನವೊಲಿಸಿ ಅವರಿಂದ ಆಹಾರ ಪದಾರ್ಥಗಳನ್ನು ಪಡೆದು ಪ್ರತಿ ನಿರ್ಗತಿಕರ ಮನೆಮನೆಗೂ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಕಡುಬಡವರು, ನಿರ್ಗತಿಕರನ್ನು ಗುರುತಿಸಿ, ಪ್ರತಿ ಕುಟುಂಬದ ವಾರದ ನಿರ್ವಹಣೆಗೆ ಬೇಕಾಗುವಷ್ಟು ಗೋಧಿ, ಜೋಳ, ಅಕ್ಕಿ, ಸಕ್ಕರೆ, ಚಹಾ ಪುಡಿ, ಎಣ್ಣೆ ಉಪ್ಪು, ಕಡ್ಲಿಬೇಳೆ ಮುಂತಾದ ಆಹಾರ ಧಾನ್ಯಗಳ ಕಿಟ್ ತಯಾರಿಸಿ ಮನೆಮನೆಗೂ ವಿತರಿಸಿ ಬಡವರ ಬದುಕಲ್ಲಿ ಭರವಸೆ ಮೂಡಿಸಿದ್ದಾರೆ.
ಶಶಿಧರ ಉಳ್ಳೇಗಡ್ಡಿ, ಹಾಜಿ ಕುತುಬುದ್ದೀನ್ ರೋಣ, ಜಾವೇದ ಭಾಗವಾನ, ಬಾಬು ಶೆಟ್ಟರ, ರಮೇಶ್ ಶೆಟ್ಟರ, ಕೆಎಲ್ಇ ಪ್ರಾಂಶುಪಾಲ ಎಸ್.ಐ. ಕುಂದಗೋಳ, ಸುರೇಶ ಹೊಸೂರ, ಚೆನ್ನಪ್ಪ ಹೊನ್ನೂರ, ಬಸು ಖೋತ, ಮಲ್ಲಪ್ಪ ಪತ್ತಾರ, ಅಲ್ಲಾಭಕ್ಷ್ ಬಂಡೇಬುರುಜ (ಬಕ್ರು ಬಾರೇಗಡ್ಡಿ) ,ರಾಘವೇಂದ್ರ ತೇಲಿ ಮುಂತಾದವರು ಗೆಳೆಯರ ಬಳಗದ ಮನವಿಗೆ ಸ್ಪಂದಿಸಿ ಉದಾರ ದಾನ ನೀಡಿದ ಮಾನವೀಯತೆ ಮೆರೆದಿದ್ದಾರೆ
Share
WhatsApp
Follow by Email