ಕೊರೋನಾ: ದೂರವಾಣ ಮೂಲಕ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಳ್ಳೂರ, ಮುಗಳಖೋಡ ಕ್ರಾಸ್ ಮತ್ತು ಯಾದವಾಡ ಗ್ರಾಮಗಳಲ್ಲಿ ಚೆಕ್ ಪೊಸ್ಟ್ ನಿರ್ಮಿಸಲು ಸೂಚನೆ

ಮೂಡಲಗಿ: ಪ್ರಸ್ತುತ ವಿಶ್ವದಾದ್ಯಂತ ಕಾಡುತ್ತಿರುವ ಪ್ರಬಲ ಕೊರೋನಾ ವೈರಸ್ ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶವನ್ನು ಸಂಪೂರ್ಣವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಕೊರೋನಾ ವೈರಸ್ ಮುಕ್ತವಾಗಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವಂತೆ ಅರಭಾಂವಿ ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಹೇಳಿದರು.
ಪಟ್ಟಣದ ಈರಣ್ಣ ದೇವಸ್ಥಾನದ ಆವರಣದಲ್ಲಿ ಸೋಮವಾರದಂದು ದೂರವಾಣ ಮೂಲಕ ಮೂಡಲಗಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಲಾಕ್ ಡೌನ್ ಸಂಪೂರ್ಣವಾಗಿ ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮೂಡಲಗಿ ತಾಲೂಕಿನ ಅಕ್ಕ ಪಕ್ಕದಲ್ಲಿರುವ ರಾಯಬಾಗ ಮತ್ತು ಮುಧೋಳ ತಾಲೂಕುಗಳಲ್ಲಿ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇದಕ್ಕೆ ಹೊಂದಿಕೊಂಡಿರುವ ಆಯಾ ಗ್ರಾಮಗಳ ಸಾರ್ವಜನಿಕರಲ್ಲಿ ಅಧಿಕಾರಿಗಳು ವಿಶೇಷ ಜಾಗೃತಿ ಮೂಡಿಸಬೇಕು. ಮನೆಯಿಂದ ಯಾರು ಆಚೆಗೆ ಹೋಗದಂತೆ ಬೀಗಿ ಕ್ರಮಗಳನ್ನು ಕೈಗೊಳ್ಳಬೇಕು. ಹಳ್ಳೂರ, ಮುಗಳಖೋಡ ಕ್ರಾಸ್ ಮತ್ತು ಯಾದವಾಡ ಗ್ರಾಮಗಳಲ್ಲಿ ಕೂಡಲೇ ಚೆಕ್ ಪೊಸ್ಟಗಳನ್ನು ನಿರ್ಮಿಸ ಬೇಕು. ಇದರಿಂದ ರಾಯಬಾಗ ಮತ್ತು ಮುಧೋಳ ತಾಲೂಕಗಳಿಗೆ ನಮ್ಮ ತಾಲೂಕಿನ ಸಾರ್ವಜನಿಕರಿಗೆ ಅನಗತ್ಯವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅರಭಾವಿ ಕ್ಷೇತ್ರದ ಕೆಲವಡೆ ಸಾರ್ವಜನಿಕರಿಗೆ ಪಡಿತರ ಆಹಾರ ಧಾನ್ಯಗಳನ್ನು ಹಂಚುವಲ್ಲಿ ಅಂಗಡಿಕಾರರು ಕಿರಿಕಿರಿ ಉಂಟುಮಾಡುತ್ತಿರುವ ಬಗ್ಗೆ ಅಲಲ್ಲಿ ದೂರುಗಳು ಕೇಳಿ ಬರುತ್ತಿವೆ. ಫಲಾನುಭವಿಗಳಿಂದ ಒಟಿಪಿ ಕೇಳುತ್ತಿರುವುದು ಸಮಂಜಸವಲ್ಲ. ಕೊರೋನಾದಂತಹ ಮಹಾಮಾರಿಗೆ ಜನ ತತ್ತರಿಸುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು, ಅನಾಥರನ್ನು ಗುರುತಿಸಿ ಅಂತವರಿಗೆ ಮಾನವಿಯತೆಯ ಆಧಾರದ ಮೇಲೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದ ಅವರು, ಪಡಿತರ ಹಂಚುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಪಾಲಿಸುವಂತೆ ಸೂಚನೆ ನೀಡಿದರು.
ಕೊರೋನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ವೈರಸ್ ತಡೆಗಟ್ಟಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಸಾರ್ವಜನಿಕರು ತಮ್ಮ ಮನೆ, ಅಕ್ಕ-ಪಕ್ಕದಲ್ಲಿ ಬೇರೆ ಪ್ರದೇಶದಿಂದ ಬಂದ ವ್ಯಕ್ತಿಗಳ ಬಗ್ಗೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕಾರ ನೀಡಬೇಕೆಂದರು.
ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಸ್ಥಾನಿಕವಾಗಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಗಂಭೀರ ಸಮಸ್ಯೆಗಳ ಬಿಕ್ಕಟ್ಟು ಪರಿಹಾರಕ್ಕಾಗಿ ತಮ್ಮ ಮೇಲಾಧಿಕಾರಿಗಳು ಅಥವಾ ಎನ್.ಎಸ್.ಎಫ್ ಅತಿಥಿಗೃಹವನ್ನು ಸಂಪರ್ಕಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು
ಶಾಸಕರ ಆಪ್ತಸಹಾಯಕ ನಾಗೇಶ ಶೇಖರಗೋಳ ಮೂಲಕ ತಹಶೀಲ್ದಾರ ಅವರೊಂದಿಗೆ ದೂರವಾಣ ಮೂಲಕ ಮೂಡಲಗಿ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಸ್ಥಿತಿಗತಿಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಪಡೆದುಕೊಂಡರು.
ಮೂಡಲಗಿ ತಹಶೀಲ್ದಾರ ದಿಲಶಾದ ಮಹಾತ, ಬಿಇಒ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಶಾಸಕರ ಪ್ರತಿನಿಧಿಗಳಾದ ನಾಗೇಶ ಶೇಖರಗೋಳ, ದಾಸಪ್ಪ ನಾಯಿಕ, ನಿಂಗಪ್ಪ ಕುರಬೇಟ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ: ಭಾರತಿ ಕೋಣ , ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಪಿಎಸ್‍ಐಗಳಾದ ಮಲ್ಲಿಕಾರ್ಜುನ ಸಿಂಧೂರ, ಹನಮಂತ ನೇರಳೆ, ಹಾಲಪ್ಪ ಬಾಲದಂಡಿ, ಸಿಡಿಪಿಓ ವಾಯ್.ಎಮ್.ಗುಜನಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಎಮ್.ನದಾಫ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಜಾನಮಟ್ಟಿ, ಅರಭಾಂವಿ, ಕಲ್ಲೋಳಿ ಮತ್ತು ನಾಗನೂರ ಪ.ಪಂ ಮುಖ್ಯಾಧಿಕಾರಿಗಳಾದ ಕೆ.ಬಿ.ಬೆಣ್ಣಿ , ಅರುಣಕುಮಾರ, ರವಿ ರಂಗಸುಭೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Share
WhatsApp
Follow by Email