ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿ : ಇಒ‌ ಬಸವರಾಜ ಹೆಗ್ಗನಾಯಕ

ವರದಿ: ಕೆ.ವಾಯ್ ಮೀಶಿ
ಮೂಡಲಗಿ: ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಜೀವಕ್ಕಿರುವ ಹೆಚ್ಚಿನ ಮಹತ್ವ ಯಾವುದಕ್ಕೂ ಇರುವದಿಲ್ಲ ಎಂದು ಮೂಡಲಗಿ ಮತ್ತು ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ನಗರದಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ, ತಹಶೀಲ್ದಾರ, ಸಿಡಿಪಿಯು, ಪುರಸಭೆ ಕಾರ್ಯಾಲಯಗಳಿಗೆ ಭೇಟಿ ನೀಡಿ ಸಿಬ್ಬಂದಿಗಳಿಗೆ ಕೊರೋನಾ ಕುರಿತು ಜಾಗೃತಿ ಹಾಗೂ ನಗರದಲ್ಲಿಯ ಲಾಕ್ ಡೌನ್ ಕುರಿತು ವಿಕ್ಷೀಸಿದರು. ಮೂಡಲಗಿ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಯಾವುದೇ ಪ್ರಕರಣಗಳು ಇಲ್ಲಿಯವರೆಗೂ ಕಂಡು ಬಂದಿಲ್ಲ, ಆದರೂ ಇನ್ನೂ ಕೆಲವು ದಿನಗಳ ವರೆಗೂ ಜನರು ಮುಂಜಾಗ್ರತರಾಗಿ ತಮ್ಮಲ್ಲಿ ತಾವೇ ಲಾಕ್ ಡೌನ್ ಹಾಕಿಕೊಳ್ಳಬೇಕು. ತಾಲೂಕಿನಲ್ಲಿ ಕೊರೋನಾ ಕಂಡು ಬರದ ರೀತಿಯಲ್ಲಿ ಸೈನಿಕರ ರೀತಿಯಲ್ಲಿ ಜವಾಬ್ದಾರಿಯುತವಾಗಿ ಅಗತ್ಯ ಕ್ರಮವಹಿಸಬೇಕು. ಕೆ.ಎಮ್.ಎಫ್ ರಾಜ್ಯಾಧ್ಯಕ್ಷರು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನೀಡಲಿರುವ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ನಿರೀಕ್ಷಿಸಿದರು.
ಸಂತಾಪ ಸೂಚನೆ: ಈ ಭಾಗದ ನಡೆದಾಡುವ ದೇವರು ಸಮಾಜ ಸುಧಾರಕರು, ಉನ್ನತ ಆಚಾರ ವಿಚಾರ ಧಾರಿಗಳಾಗಿದ್ದ ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀಠಾಧಿಕಾರಿಗಳಾಗಿದ್ದ ಶ್ರೀ ಶ್ರೀಪಾಬೋಧ ಮಹಾಸ್ವಾಮೀಜಿಗಳು ದೈವಾಧಿನರಾಗಿರುವದು ತುಂಬಲಾರದ ನಷ್ಟವಾಗಿದೆ. ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಅವರ ತತ್ವಾದರ್ಶನಗಳಂತೆ ಅವರ ಕೃಪೆಯಿಂದ ಅವರ ಸಲಹೆ ಸೂಚನೆಯಂತೆ ಸಮಾಜದ ಒಳತಿಗಾಗಿ ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಸದಾ ಸಿದ್ದರಾಗೋಣ ಎಂದರು.
ಬಿಇಒ ಎ.ಸಿ ಮನ್ನಿಕೇರಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ತಾಲೂಕಿನಲ್ಲಿ ಪೊಲೀಸ್, ಆರೋಗ್ಯ, ಶಿಕ್ಷಣ, ಸಿಡಿಪಿಯು, ಸ್ಥಳೀಯ ಇಲಾಖೆಗಳ ಸಹಕಾರದೊಂದಿಗೆ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸರಕಾರದ ನಿಯಮಾವಳಿಯಾನುಸಾರ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೂಡಲಗಿ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ, ಅಭಿವೃದ್ಧಿ ಅಧಿಕಾರಿಗಳಾದ ಸಂಗಮೇಶ ರೊಡ್ಡನವರ, ಹನಮಂತ ತಾಳಿಕೋಟಿ, ಹನಮಂತ ಬಸಳಿಗುಂದಿ, ಗಂಗಾಧರ ಮಲ್ಹಾರಿ, ಶ್ರೀಶೈಲ್ ತಡಸನವರ, ಯುವ ಜೀವನ ಸೇವಾ ಸಂಸ್ಥೆಯ ಈರಪ್ಪ ಢವಳೇಶ್ವರ, ಕೆ.ಎಲ್.ಮೀಶಿ ಉಪಸ್ಥಿತರಿದ್ದರು.
Share
WhatsApp
Follow by Email