ಸಿಒಎ ನೇಮಕ: ‘ಸುಪ್ರೀಂ’ ಮೆಟ್ಟಿಲೇರಿದ ಕೆಒಎ

ಸಿಒಎ ನೇಮಕ: ‘ಸುಪ್ರೀಂ’ ಮೆಟ್ಟಿಲೇರಿದ ಕೆಒಎ

ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಗೆ ಆಡಳಿತ ಸಮಿತಿಯನ್ನು ನೇಮಕ ಮಾಡಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಒಲಿಂಪಿಕ್ ಸಂಸ್ಥೆಯು (ಕೆಒಎ) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಐಒಎ ಆಡಳಿತವನ್ನು ನೋಡಿಕೊಳ್ಳಲು ಹೈಕೋರ್ಟ್ ಆಗಸ್ಟ್ 16ರಂದು ಸಿಒಎ ನೇಮಕ ಮಾಡಿತ್ತು .ಆದರೆ ಈ ನೇಮಕದ ಸಿಂಧುತ್ವವನ್ನು ಪ್ರಶ್ನಿಸಿರುವ ಕೆಒಎ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ನಿಗದಿಯ ವೇಳೆಯಲ್ಲಿ ಐಒಎಗೆ ಚುನಾವಣೆ ನಡೆಸಲು ಕೂಡ ಅನುವು ಮಾಡಿಕೊಡುವಂತೆಯೂ ಕೋರಿದೆ.ಐಒಎಗೆ ಅನಿಲ್ ಖನ್ನಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹೈಕೋರ್ಟ್ ಕ್ರಮವೂ ನಿಯಮಬಾಹಿರವಾಗಿದೆ.

ಜುಲೈ 23ರಂದು ಕಾರ್ಯನಿರ್ವಾಹಕ ಸಮಿತಿಯು ಮಾಡಿರುವ ನಿರ್ಣಯದನ್ವಯ ಅದಿಲೆ ಸುಮರಿವಾಲಾ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದೂ ಪ್ರತಿಪಾದಿಸಿದೆ.ರಾಜ್ಯ ಒಲಿಂಪಿಕ್ ಸಂಸ್ಥೆಗಳ (ಎಸ್‌ಒಎ) ಪಾತ್ರವನ್ನೂ ಕ್ಷೀಣಗೊಳಿಸಿರುವ ಹೈಕೋರ್ಟ್, ಐಒಎನಲ್ಲಿ ಮತದಾನದ ಹಕ್ಕನ್ನು ಮೊಟಕುಗೊಳಿಸಿದೆ. ಎಸ್‌ಒಎ ಸದಸ್ಯರು ಐಒಎ ಕಾರ್ಯನಿರ್ವಾಹಕ ಸಮಿತಿಗೆ ಅಥವಾ ಪದಾಧಿಕಾರಿಯಾಗಿ ಚುನಾಯಿತರಾಗುವಂತಿಲ್ಲ ಎಂದು ಸೂಚಿಸಿರುವುದು ಅಸಮರ್ಪಕವಾಗಿದೆ. ಇದರಿಂದಾಗಿ ರಾಜ್ಯ ಸಂಸ್ಥೆಗಳು ಸರ್ಕಾರಿ ಅನುದಾನ ಹಾಗೂ ಸೌಲಭ್ಯಗಳಿಂದ ವಂಚಿತವಾಗುವ ಸಾಧ್ಯತೆಗಳಿವೆ ಎಂದೂ ಕೆಒಎ ಉಲ್ಲೇಖಿಸಿದೆ. ಸಿಒಎ ನೇಮಕ ಪ್ರಶ್ನಿಸಿ ಐಒಎ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಆ. 18ರಂದು ನಡೆಸಿದ್ದ ಸುಪ್ರೀಂ ‘ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಐಒಎಯ ದೈನಂದಿನ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳಬಾರದು’ ಎಂದು ಮಧ್ಯಂತರ ಆದೇಶ ನೀಡಿತ್ತು.‘ಐಒಎಯಲ್ಲಿರುವ ನಿಯಮಾವಳಿಯು ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿ (ಐಒಸಿ)ಯಿಂದ ಮಾನ್ಯಗೊಂಡಿರುವುದಾಗಿದೆ.

ಅದರನ್ವಯ ಐಒಎ ಮತ್ತು ರಾಜ್ಯ ಸಂಸ್ಥೆಗಳ ನಡುವಣ ಇರುವ ವ್ಯವಸ್ಥಿತ ಆಡಳಿತವನ್ನು ಅರಿಯುವಲ್ಲಿಯೂ ಹೈಕೋರ್ಟ್‌ ವಿಫಲವಾಗಿದೆ. ಅರ್ಜಿದಾರರು ಐಒಎಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತಡೆಯೊಡ್ಡಲಾಗಿದೆ. ಅವರಿಂದ ಒಂದು ವಿವರಣೆ ಕೂಡ ಪಡೆಯದೇ ಈ ಕ್ರಮ ಜರುಗಿಸಲಾಗಿದೆ’ ಎಂದುಕೆಒಎ ಪರ ವಕೀಲರಾದ ರಾಜೇಶ್ ಇನಾಮದಾರ್, ಹರ್ಷ ಪಾಂಡೆ ಮತ್ತು ಅಶ್ವಿನ್ ಜಿ ರಾಜ್ ಹೇಳಿದ್ದಾರೆ.

Share
WhatsApp
Follow by Email