ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಒಂದು ವಾರದ ಕಾಲ ಶಾಲಾ-ಕಾಲೇಜು, ಮಾಲ್, ಥೀಯೇಟರ್ಗಳನ್ನ ಬಂದ್ ಮಾಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ ಆದೇಶ ಜಾರಿಯಲ್ಲಿದೆ. ಇದರ ಜೊತೆಗೆ ನಗರದ ಪಿಜಿ, ಹಾಸ್ಟೆಲ್ಗಳಲ್ಲಿ ಇರುವವರ ಮೇಲೂ ಪಾಲಿಕೆ ನಿಗಾ ಇಟ್ಟಿದೆ. ಸದ್ಯ ಪೇಯಿಂಗ್ ಗೆಸ್ಟ್ ಅಥವಾ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಬಿಬಿಎಂಪಿ ಮನವಿ ಮಾಡಿದೆ. ರಾಜ್ಯ ಸರ್ಕಾರದ ಆದೇಶದಂತೆ ನಿಮ್ಮ ಶಿಕ್ಷಣ ಸಂಸ್ಥೆ ರಜೆ ಘೋಷಿಸಿದ್ದರೆ, ಕೂಡಲೇ ನಿಮ್ಮ ಮನೆ ಅಥವಾ ಊರಿಗೆ ತೆರಳಿ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮನವಿ ಮಾಡಿದ್ದಾರೆ. ಹಾಗೇ ಪಿಜಿಗಳಲ್ಲಿ ಕಟ್ಟುನಿಟ್ಟಾಗಿ ಸ್ವಚ್ಛತೆ ಕಾಪಾಡಬೇಕು ಎಂದು ಮಾಲೀಕರಿಗೆ ಆದೇಶಿಸಿದ್ದಾರೆ.