ಸರ್ಕಾರ, ಆರೋಗ್ಯ ಇಲಾಖೆ ನೀಡುವ ಆದೇಶಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ : ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ
ಕೋವಿಡ್-೧೯ ಕೊರೊನಾ ವೈರಸ್ ಸಮುದಾಯದಲ್ಲಿ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಾಲಕಾಲಕ್ಕೆ ಸರ್ಕಾರ, ಆರೋಗ್ಯ ಇಲಾಖೆ ನೀಡುವ ಆದೇಶಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಇದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಲು ಮಾಧ್ಯಮಗಳ ಸಹಕಾರವು ಮುಖ್ಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ಹುಬ್ಬಳ್ಳಿ-ಧಾರವಾಡ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಬ್ಯೂರೋ ಮುಖ್ಯಸ್ಥರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಾಕ್‌ಡೌನ್ ಮತ್ತು ನಿಷೇಧಾಜ್ಞೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಅಲ್ಲದೇ, ಸಾರ್ವಜನಿಕರಿಗೆ ಅಗತ್ಯದ ಔಷಧಿ, ತರಕಾರಿ, ದಿನಸಿ ಸಾಮಾನುಗಳು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸಲು ಪ್ರತ್ಯೇಕ ಸಹಾಯವಾಣಿ, ಮಾರಾಟಗಾರರಿಗೆ ಪಾಸ್ ವ್ಯವಸ್ಥೆ ಮಾಡಿದೆ. ಪಾಸ್ ದುರ್ಬಳಿಸಿಕೊಳ್ಳದಂತೆ ಎಚ್ಚರಿಕೆಯೂ ನೀಡಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಲಸಿಗರು, ನಿರಾಶ್ರಿತರು, ಕಾರ್ಮಿಕರು ಸೇರಿದಂತೆ ಸುಮಾರು ೩ ಸಾವಿರ ನಿರಾಶ್ರಿತರಿಗೆ ಊಟ, ಉಪಹಾರ, ವಸತಿ, ಔಷಧಿ, ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಉಚಿತ ನೀಡಲಾಗಿದೆ. ಮಾನಸಿಕ ಆರೋಗ್ಯ ಕಾಪಾಡಲು ಆನ್‌ಲೈನ್ ಸಹಾಯವಾಣಿ ಹಾಗೂ ಡಿಮ್ಹಾನ್ಸ್ ವೈದ್ಯರಿಂದ ಚಿಕಿತ್ಸಾ ಶಿಬಿರಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಫಲಾನುಭವಿಗಳ ಜನಧನ ಖಾತೆಗೆ ಸಹಾಯಧನ ಬಂದಿದ್ದು, ಅವರು ಸಹ ಪಡೆಯುತ್ತಿದ್ದಾರೆ. ತರಕಾರಿ, ಹಣ್ಣು ಮಾರಾಟಗಾರರು ಆರೋಗ್ಯ ಸುರಕ್ಷತಾ ಕ್ರಮ ಅನುಸರಿಸದ ಬಗ್ಗೆ ಮತ್ತು ್ರಓಣಿ, ಗ್ರಾಮಗಳಲ್ಲಿ ಜನರು ಅಲ್ಲಲ್ಲಿ ಗುಂಪು ಸೇರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಿದ್ದು, ಸರಿಪಡಿಸಲು ಪೊಲೀಸ್ ಇಲಾಖೆ ನಿರ್ದೇಶನ ನೀಡಿದ್ದಾಗಿ ತಿಳಿಸಿದರು.
ಕೆಲ ಖಾಸಗಿ ವ್ಯಕ್ತಿಗಳು ಸಾಮಾಜಿಕ ಅಂತರ ಕಾಪಾಡದೇ ಸ್ಲಂ ಹಾಗೂ ಇತರ ಪ್ರದೇಶಗಳಲ್ಲಿ ಊಟ, ಉಪಹಾರ, ದಿನಸಿ ವಿತರಿಸುವುದು ಗಮನಕ್ಕೆ ಬಂದಿದ್ದು, ಈ ಚಟುವಟಿಕೆ ನಿರ್ಬಂಧಿಸಿದೆ. ಜಿಲ್ಲಾಡಳಿತದ ಸಂಗ್ರಹಣಾ ಕೇಂದ್ರಕ್ಕೆ ತಲುಪಿಸಲು ಸೂಚಿಸಿದೆ. ಅನಗತ್ಯ ಸಹಾಯ ಮಾಡುವ ನೆಪದಲ್ಲಿ ಅನುಮತಿ ಇಲ್ಲದೇ, ಸಂಚರಿಸಿದವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೋವಿಡ್ ಪೀಡಿತ ವ್ಯಕ್ತಿ ಅಥವಾ ಕ್ವಾರಂಟೈನ್‌ದ ವ್ಯಕ್ತಿ, ಪ್ರದೇಶ, ಸ್ಥಳದ ಬಗ್ಗೆ ಯಾವುದೇ ವ್ಯಕ್ತಿ ಚಿತ್ರ, ವಿಡಿಯೋ ಸೇರಿದಂತೆ ಇತರೆವಿವರ ಬಹಿರಂಗ ಪಡಿಸುವಂತಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮಗಳು ಸಹಕರಿಸಬೇಕು. ಸಾಮಾಜಿಕ ಜಾಲಾತಣದಲ್ಲಿ ಸುಳ್ಳು ವದಂತಿ ಹಬ್ಬಿಸುವ ಖಾಸಗಿ ವ್ಯಕ್ತಿಗಳ ಪ್ರಕರಣ ದಾಖಲಿಸುವುದಾಗಿಯೂ ಹೇಳಿದರು.
ಈ ವೇಳೆ ವಿವಿಧ ಮಾಧ್ಯಮಗಳ ಸ್ಥಾನಿಕ ಮುಖ್ಯಸ್ಥರು, ಪ್ರಧಾನ ವರದಿಗಾರರು, ಪ್ರಚಲಿತ ಸಮಸ್ಯೆಗಳು ಮತ್ತು ಅವುಗಳ ಸೂಕ್ತ ನಿರ್ವಹಣೆ, ಪರಿಹಾರಕ್ಕಾಗಿ ಸಲಹೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ಸೇರಿದಂತೆ ಅನೇಕರು ಇದ್ದರು.
Share
WhatsApp
Follow by Email