ರಾಯಬಾಗ : ಮಹಾಮಾರಿ ಕೊರೋನಾ ವಿರುದ್ಧ ಹೋರಾಡುತಿರುವ ಪೌರಕಾರ್ಮಿಕರನ್ನು ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಸನ್ಮಾನಿಸಿ ಪೌರಕಾರ್ಮಿಕರ ಕಾಲಿಗೆ ನಮಸ್ಕರಿಸಿದ ಘಟನೆ ನಡೆದಿದೆ.
ಶುಕ್ರವಾರ ಕಾರ್ಮಿಕರ ದಿನಾಚರಣೆ ನಿಮಿತ್ತ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಪೌರಕಾರ್ಮಿರನ್ನುದ್ದೇಶಿ ಮಾತನಾಡಿದ ಅವರು ಮಹಾಮಾರಿ ಕೊರೋನಾ ಸೋಂಕು ಹಬ್ಬಿರುವ ಸಮಯದಲ್ಲಿ ನಗರಪಟ್ಟಣಗಳ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ, ನಿಮ್ಮೆಲ್ಲರ ಸೇವೆ ಶ್ಲಾಘನೀಯ ಎಂದರು,
ಜಿಲ್ಲಾಡಳಿತ ಸೇರಿದಂತೆ ತಾಲೂಕಾಡಳಿತವು ಕೋರೊನಾ ಸೋಂಕಿನ ವಿರುದ್ಧ ಹೋರಾಡಲು ಪೌರಕಾರ್ಮಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಅಲ್ಲದೇ ಶುಕ್ರವಾರ ಕುಡಚಿಯಲ್ಲಿ ಮೂರು ಪಾಸಿಟಿನ್ ಪ್ರಕರಣ ಪತ್ತೆಯಾಗಿದ್ದು ಸಾರ್ವಜನಿಕರು ಮನೆಯಲ್ಲಿದ್ದು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಿದರು. ಬಳಿಕ ಪೌರಕಾರ್ಮಿಕರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿದ ಅವರು ತಾಲ್ಲೂಕು ದಂಡಾಧಿಕಾರಿ ಎನ್ನುವ ಅಹಮ್ಮು ಇಲ್ಲದೇ ಪೌರಕಾರ್ಮಿಕರ ಕಾಲು ಮುಟ್ಟಿ ನಮಸ್ಕರಿಸಿ ನೆರೆದವರ ಹುಬ್ಬೇರುವಂತೆ ಮಾಡಿದರು. ಎಸ್.ಪಿ. ಕಂಕಣವಾಡಿ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ. ಹಾಗೂ ಪಪಂ ಸಿಬ್ಬಂದಿಗಳು ಇದ್ದರು.