ಮದ್ಯ, ಗುಟ್ಕಾ, ತಂಬಾಕು ಪ್ರಿಯರಿಗೆ ಮೋದಿ ಶಾಕ್

ಬೆಳಗಾವಿ: ಮದ್ಯ ಸೇರಿದಂತೆ ತಂಬಾಕು ಮತ್ತು ಗುಟ್ಕಾ ಮಾರಾಟಕ್ಕೆ ಮೇ 3 ರ ವರೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು, ಎಲ್ಲ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಈ ನಿರ್ದೇಶನಗಳನ್ನು ಬದಲಾಯಿಸುವಂತಿಲ್ಲ.
ಇಂದು ಬೆಳಿಗ್ಗೆ ಲಾಕ್ ಡೌನ್ ಗೆ ಸಂಬಂಧಪಟ್ಟಂತೆ ಕೇಂದ್ರದ ಹೊಸ ಮಾರ್ಗಸೂಚಿಗಳು ಬಂದಿದ್ದು, ಅದರ ಪ್ರಕಾರ ಮದ್ಯ, ಗುಟ್ಕಾ ಮತ್ತು ತಂಬಾಕು ಮಾರಾಟಕ್ಕೆ ಮೇ 3 ರ ತನಕ ನಿರ್ಬಂಧ ವಿಧಿಸಲಾಗಿದೆ. ಏಪ್ರಿಲ್ 15 ರಿಂದ ಎಂ.ಎಸ್.ಐ.ಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟ ಆರಂಭಗೊಳ್ಳಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಮದ್ಯಪ್ರಿಯರಿಗೆ ಕೇಂದ್ರದ ಈ ನಿರ್ಧಾರದಿಂದ ಭಾರೀ ನಿರಾಸೆಯಾಗಿದೆ.
ರಾಜ್ಯ ಸರ್ಕಾರ ಇಂದಿನಿಂದ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಹುದು ಎನ್ನುವ ನಿರೀಕ್ಷೆಯಿಂದ ಎಂ.ಎಸ್.ಐ.ಎಲ್ ಅಂಗಡಿ ಮಾಲೀಕರು, ಅಂಗಡಿಗಳ ಮುಂದೆ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಕೆಲವರು ಸುಣ್ಣ ಹಾಕಿ ಚೌಕಗಳನ್ನು ಬರೆದಿದ್ದರೆ ಇನ್ನು ಕೆಲವರು ಬಿದಿರು ಬಳಸಿ ವ್ಯವಸ್ಥೆ ಮಾಡಿದ್ದರು. ಕೇಂದ್ರದ ಮಾರ್ಗಸೂಚಿ ಮದ್ಯಪ್ರಿಯರು ಮತ್ತು ಮಾರಾಟಗಾರರು ಎಲ್ಲರಿಗೂ ಶಾಕ್ ನೀಡಿದೆ.
ಇನ್ನು ಕೇಂದ್ರ ಸರ್ಕಾರ ತಂಬಾಕು ಮತ್ತು ಗುಟ್ಕಾ ಮೇಲೂ ಬ್ಯಾನ್ ಮುಂದುವರಿಸಿದೆ. ಜನರು ತಂಬಾಕು, ಗುಟ್ಕಾ ತಿಂದು ಸಿಕ್ಕಸಿಕ್ಕಲ್ಲಿ ಉಗಿಯುವುದರಿಂದ, ಆ ಮೂಲಕವೂ ಕೊರೊನಾ ಹರಡಬಹುದು ಎಂದು ಆರೋಗ್ಯ ಇಲಾಖೆ ಹೇಳಿದ್ದರಿಂದ, ಎರಡನ್ನೂ ಮೇ ೩ರ ವರೆಗೆ ಬ್ಯಾನ್ ಮಾಡಲಾಗಿದೆ.
ಉಳಿದಂತೆ ಕೃಷಿ, ಕೈಗಾರಿಕೆ, ಇ-ಕಾಮರ್ಸ್, ಇಂಟರನೆಟ್ ಸೇವೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸ್ವಲ್ಪ ಮಟ್ಟದ ರಿಯಾಯಿತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಮಾರ್ಗಸೂಚಿಗಳನ್ನು ರಾಜ್ಯಗಳು ಅಗತ್ಯ ಕಂಡುಬಂದರೆ ಏಪ್ರಿಲ್ 20 ರ ನಂತರ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಮದ್ಯ, ಗುಟ್ಕಾ ಮತ್ತು ತಂಬಾಕು ಮಾರಾಟದ ವಿಷಯದಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇಲ್ಲ.
Share
WhatsApp
Follow by Email