ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ನಡುವೆಯೇ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣವೂ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಎಸ್ಐಟಿಗೆ ವಹಿಸಿದ ನಂತರ, ದೂರು ನೀಡಿದ್ದ ಸುಜಾತಾ ಭಟ್ ಇದೀಗ ತಮ್ಮ ವರಸೆ ಬದಲಿಸಿಕೊಂಡಿದ್ದಾರೆ.
ಅನನ್ಯಾ ಭಟ್ ಕುರಿತು ದಾಖಲೆಗಳನ್ನು ತೋರಿಸಲು ಒತ್ತಡ ಹೆಚ್ಚಾಗುತ್ತಿದ್ದಾಗ, ಸುಜಾತಾ ಭಟ್ ಮಹಿಳೆಯೊಬ್ಬರ ಫೋಟೋವನ್ನು ತೋರಿಸಿದ್ದರು. ಆದರೆ ಆ ಫೋಟೋದಲ್ಲಿ ಕಾಣಿಸಿಕೊಂಡಿದ್ದು ಅನನ್ಯಾ ಭಟ್ ಅಲ್ಲ, ವಾಸಂತಿ ಎಂಬ ಆರೋಪಗಳು ಕೇಳಿಬಂದವು. ಇದರೊಂದಿಗೆ, ಸುಜಾತಾ ಭಟ್ ನೀಡಿದ ಆರೋಪಗಳ ಬಗ್ಗೆ ಅನುಮಾನಗಳು ಮೂಡಿವೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಎಸ್ಐಟಿಗೆ ರವಾನಿಸಲಾಗಿದ್ದು, ಎಸ್ಐಟಿ ಸುಜಾತಾ ಭಟ್ಗೆ ಪ್ರಕರಣದ ವಿವರ ನೀಡುವಂತೆ ನೋಟಿಸ್ ನೀಡಿದೆ. ಆದರೆ, ಅವರು ನೋಟಿಸ್ಗೆ ಉತ್ತರಿಸದೇ, ಒಂದು ಆಡಿಯೋ ಬಿಡುಗಡೆ ಮಾಡಿ ಕೇಸ್ ವಾಪಾಸ್ ಪಡೆಯುವುದಾಗಿ ತಿಳಿಸಿದ್ದಾರೆ.
2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತಾ ಭಟ್ ಜುಲೈ 15ರಂದು ದೂರು ದಾಖಲಿಸಿದ್ದರು. “ನನ್ನ ಮಗಳು ಬದುಕಿದ್ದಾಳೆ ಅಥವಾ ಇಲ್ಲ ಗೊತ್ತಿಲ್ಲ. ಸತ್ತಿದ್ದರೆ ಆಕೆಯ ಕಳೇಬರವನ್ನಾದರೂ ಹುಡುಕಿಕೊಡಿ, ಶಾಸ್ತ್ರೋಕ್ತ ಅಂತ್ಯಕ್ರಿಯೆ ಮಾಡಲು ಅವಕಾಶ ಕೊಡಿ” ಎಂದು ಅವರು ಆಗ ಮನವಿ ಮಾಡಿದ್ದರು.
