ನಾಳೆ ಲಾಕ್‍ಡೌನ್ 3.0 ಮುಗಿಯಲಿದ್ದು, ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲು ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ: ಕೆಎಂಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ನಾಳೆ ಲಾಕ್‍ಡೌನ್ 3.0 ಮುಗಿಯಲಿದ್ದು, ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲು ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ: ಕೆಎಂಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಬೇರೆ-ಬೇರೆ ಜಿಲ್ಲೆ, ರಾಜ್ಯ ಹಾಗೂ ದೇಶಗಳಿಂದ ಬಂದಿರುವ ಜನರ ಆರೋಗ್ಯವನ್ನು ಪರಿಶೀಲಿಸಬೇಕು. ಇದರಲ್ಲಿ ಯಾವುದೇ ಅನುಕಂಪ ತೋರದೇ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಬೇಕೆಂದು ಅರಭಾವಿ ಶಾಸಕ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಕೋವಿಡ್-19 ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೂರವಾಣಿ ಮೂಲಕ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆಯನ್ನು ನಡೆಸಿ ಅವರು ಮಾತನಾಡಿದರು.
ಅಗತ್ಯಬಿದ್ದಲ್ಲಿ ಪೊಲೀಸ್‍ರ ಸಹಕಾರವನ್ನು ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಾಳೆ ಲಾಕ್‍ಡೌನ್ 3.0 ಮುಗಿಯಲಿದ್ದು, ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲು ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಯಾವುದೇ ವ್ಯಕ್ತಿಗಳು ತಮ್ಮೂರಿಗೆ ಬಂದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಒಂದು ವೇಳೆ ಇಂತಹ ವಿಷಯಗಳನ್ನು ಮುಚ್ಚಿಡುವ ಪ್ರಯತ್ನ ನಡೆಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅವರು ಸೂಚನೆ ನೀಡಿದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಗಳ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಲಾಕ್‍ಡೌನ್ ಸಡಿಲಿಕೆ ನಂತರ ರಾಜ್ಯದೆಲ್ಲೆಡೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಲ್ಲಿ ಜನರ ನಿರ್ಲಕ್ಷ್ಯವೇ ಕಾರಣವಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕೆ ರಾಮಬಾಣವೆಂದು ಹೇಳಿದರು.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಹೇಳಿದಂತೆ ಕೊರೋನಾ ಸೊಂಕಿಗೆ ಯಾವುದೇ ಔಷಧಿ ಇಲ್ಲ. ಇದು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನಾವೇ ಜಾಗೃತಿಯಿಂದ ಕೈಗೊಳ್ಳಬೇಕು. ಮುಂದೆಯೂ ಸಹ ನಮ್ಮೊಂದಿಗೆ ಕೊರೋನಾ ಇರಲಿದ್ದು, ಇದಕ್ಕೆ ಹೊಂದಿಕೊಂಡು ನಾವು ಬದುಕುವುದನ್ನು ರೂಢಿಸಿಕೊಳ್ಳುವಂತೆ ಅವರು ಹೇಳಿದರು.
ನಾಳೆಯಿಂದಲೇ ಆಯಾ ಗ್ರಾಮಗಳಲ್ಲಿ ಅಧಿಕಾರಿಗಳು ಬೀಡು ಬಿಟ್ಟು ಮುಂಜಾಗೃತೆಯ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು. ಕೊರೋನಾ ವೈರಸ್ ವಿರುದ್ಧ ಸಾಂಘಿಕ ಹೋರಾಟಕ್ಕೆ ಅಣಿಯಾಗಬೇಕು. ಮಹಾಮಾರಿ ಕೊರೋನಾ ರೋಗವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಒಂದು ವೇಳೆ ಬೇಜವಾಬ್ದಾರಿಯಾಗಿ ನಡೆದುಕೊಂಡರೇ ನಮ್ಮ ಪ್ರಾಣಕ್ಕೆ ಕುತ್ತು ಬರಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರುವಂತೆ ಅವರು ತಿಳಿಸಿದರು.
ಅನಗತ್ಯವಾಗಿ ವಾಹನ ಸಂಚಾರ ಆಗುತ್ತಿರುವುದನ್ನು ತಡೆಯಬೇಕು. ಲಾಕ್‍ಡೌನ್ ಮಾರ್ಗಸೂಚಿಗಳ ಪ್ರಕಾರ ಸೇವಾಸಿಂಧು ಮೂಲಕ ಸೂಕ್ತ ಅನುಮತಿ ಪತ್ರ(ಇ-ಪಾಸ್) ಪಡೆದು ಬೇರೆ ರಾಜ್ಯಗಳಿಂದ, ದೇಶಗಳಿಂದ ಬರುತ್ತಿರುವ ಜನರನ್ನು ಕಡ್ಡಾಯವಾಗಿ ಆರೋಗ್ಯ ಪರಿಶೀಲಿಸಿ ಸಂಸ್ಥಾ ಕ್ವಾರಂಟೈನ್‍ನಲ್ಲಿ ಇಡಬೇಕು. ಇ-ಪಾಸ್ ಅನುಮತಿ ಪಡೆಯದೇ ಕಾನೂನು ಬಾಹೀರವಾಗಿ ನೆರೆ ರಾಜ್ಯಗಳಿಂದ ಅಡ್ಡ ಮಾರ್ಗಗಳ ಮೂಲಕ ನಮ್ಮ ಗ್ರಾಮಗಳನ್ನು ಅನಧೀಕೃತವಾಗಿ ಪ್ರವೇಶಿಸುತ್ತಿರುವ ಜನರ ವಿವರವನ್ನು ಪಡೆದು ತಾಲೂಕಾಡಳಿತ ಮತ್ತು ವೈದ್ಯಾಧಿಕಾರಿಗಳು ಮಾಹಿತಿ ಪಡೆಯಬೇಕು. ಗ್ರಾಮ ಮಟ್ಟದ ಕೋವಿಡ್-19 ಟಾಸ್ಕ್‍ಪೋರ್ಸ ಕಮೀಟಿಯ ಸದಸ್ಯರುಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ ಜನಪ್ರತಿನಿಧಿಗಳ ಸಹಕಾರ ಪಡೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅವರು ಹೇಳಿದರು.
ಬೆಳಗಾವಿ ರೇಷ್ಮೆ ಇಲಾಖೆಯ ಉಪನಿರ್ದೇಶಕ ಎನ್.ಡಿ. ನಾಯಿಕ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ತಾಪಂ ಇಓ ಬಸವರಾಜ ಹೆಗ್ಗನಾಯಿಕ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಜಿ.ಬಿ. ಬಳಗಾರ, ಗೋಕಾಕ ನಗರಸಭೆ ಆಯುಕ್ತ ಹಿರೇಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಯ್.ಎಂ. ಗುಜನಟ್ಟಿ, ಗೋಕಾಕ ಹೆಸ್ಕಾಂ ಎಇಇ ಎಸ್.ಪಿ. ವರಾಳೆ, ಗೋಕಾಕ ನಗರಸಭೆ ಎಇಇ ವ್ಹಿ.ಎಸ್. ತಡಸಲೂರ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ, ಪಿಎಸ್‍ಐಗಳಾದ ಹಾಲಪ್ಪ ಬಾಲದಂಡಿ, ಮಲ್ಲಿಕಾರ್ಜುನ ಸಿಂಧೂರ, ಎಚ್.ಎನ್. ನರಳೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಪಿಎಚ್‍ಸಿಗಳ ವೈದ್ಯಾಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರು, ಈ ಸಭೆಯಲ್ಲಿ ಭಾಗವಹಿಸಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಕೋವಿಡ್-19 ಕೊರೋನಾ ರೋಗ ಹರಡದಂತೆ ಕಾರ್ಯನಿರ್ವಹಿಸುತ್ತಿರುವ ಕೊರೋನಾ ಸೇನಾನಿಗಳನ್ನು ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ದೂರವಾಣಿ ಮೂಲಕ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
Share
WhatsApp
Follow by Email