ದೇಶದ ಮರುನಾಮಕರಣ; ಕಾಂಗ್ರೆಸ್‌, INDIA ಒಕ್ಕೂಟದ ಮೇಲೆ ಮುಗಿಬಿದ್ದ ವೀರೇಂದ್ರ ಸೆಹ್ವಾಗ್‌!

ಟೀಮ್‌ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌, ದೇಶದ ಹೆಸರನ್ನು ಭಾರತ್‌ ಎಂದು ಬದಲಾಯಿಸುವುದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಮ್ಮ ವಿರುದ್ಧ ಟೀಕೆ ಮಾಡಿದ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟದ ನಾಯಕರಿಗೆ ಟ್ವೀಟ್‌ ಮಾಡುವ ಮೂಲಕ ಖಡಕ್‌ ತಿರುಗೇಟು ನೀಡಿದ್ದಾರೆ.

ನವದೆಹಲಿ (ಸೆ.6): ಕೇಂದ್ರ ಸರ್ಕಾರ ದೇಶದ ಹೆಸರನ್ನು ಇಂಡಿಯಾ ಎನ್ನುವುದರಿಂದ ಭಾರತ ಎಂದು ಅಧಿಕೃತವಾಗಿ ಬದಲಾಯಿಸಲಿದೆ ಎನ್ನುವ ಸುದ್ದಿಯ ನಡುವೆಯೇ ವೀರೇಂದ್ರ ಸೆಹ್ವಾಗ್‌ ಇದನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದರು. ಕೇಂದ್ರ ಸರ್ಕಾರ ಮುಂದಿನ ವಿಶೇಷ ಸಂಸತ್‌ ಅಧಿವೇಶನದ ವೇಳೆ ದೇಶದ ಹೆಸರನ್ನು ಮರು ನಾಮಕರಣ ಮಾಡುವ ಬಗ್ಗೆ ನಿರ್ಣಯವನ್ನು ಮಂಡನೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಅಪಾರ ಸಂಭ್ರಮ ವ್ಯಕ್ತಪಡಿಸಿದ್ದ ವೀರೇಂದ್ರ ಸೆಹ್ವಾಗ್‌, ಇನ್ನು ಮುಂದೆ ಟೀಮ್‌ ಇಂಡಿಯಾವನ್ನು ಟೀಮ್‌ ಭಾರತ್‌ ಎನ್ನುವ ಹೆಸರಿನಿಂದಲೇ ಕರೆಯಬೇಕು. ಮುಂದಿನ ವಿಶ್ವಕಪ್ ಟೂರ್ನಿಯ ವೇಳೆ ಭಾರತ ತಂಡ ಧರಿಸುವ ಜೆರ್ಸಿಯ ಮೇಲೆ ‘ಭಾರತ್‌’ ಎಂದೇ ಹೆಸರು ಇರಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲಿಯೇ ವೀರೇಂದ್ರ ಸೆಹ್ವಾಗ್‌ ಬಿಜೆಪಿಯ ಐಟಿ ಸೆಲ್‌ನ ಏಜೆಂಟ್‌. ಬ್ರಿಟಿಷರು ಕಂಡುಹಿಡಿದ ಕ್ರಿಕೆಟ್‌ನಲ್ಲಿ ಜೀವಮಾನ ಪೂರ್ತಿಗೆ ಸಾಕಾಗುವಷ್ಟು ಹಣ ಮಾಡಿ ಈಗ ಇಂಥ ಮಾಡು ಹೇಳುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು. ತಮ್ಮ ವಿರುದ್ಧ ಬಂದಿರುವ ಟೀಕೆಗೆ ಸೆಹ್ವಾಗ್‌ ಸುದೀರ್ಘ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ.

ಸೆಹ್ವಾಗ್‌ ಮಾಡಿರುವ ಟ್ವೀಟ್‌ನ ಪೂರ್ಣ ರೂಪ
ನಮ್ಮ ರಾಷ್ಟ್ರವನ್ನು ‘ಭಾರತ’ ಎಂದು ಕರೆಯಬೇಕು ಎನ್ನುವ ಬಯಕೆಯನ್ನು ಜನರು ರಾಜಕೀಯ ವಿಷಯವೆಂದು ಪರಿಗಣಿಸಿರುವುದು ತಮಾಷೆಯಾಗಿದೆ.

ನಾನು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಅಭಿಮಾನಿಯಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಒಳ್ಳೆಯವರಿದ್ದಾರೆ ಮತ್ತು ಎರಡೂ ಪಕ್ಷಗಳಲ್ಲಿ ಸಾಕಷ್ಟು ಅಸಮರ್ಥರು ಇದ್ದಾರೆ. ನಾನು ಎಂದಿಗೂ ಯಾವುದೇ ರೀತಿಯ ರಾಜಕೀಯ ಆಕಾಂಕ್ಷೆಗಳನ್ನು ಹೊಂದಿಲ್ಲ ಎಂದು ಮತ್ತೊಮ್ಮೆ ದೃಢೀಕರಿಸುತ್ತೇನೆ. ಹಾಗೇನಾದರೂ ನನಗೆ ರಾಜಕೀಯ ಅಕಾಂಕ್ಷೆಗಳು ಇದ್ದಿದ್ದರೆ, ಕಳೆದ ಲೋಕಸಭೆ ಚುನಾವಣೆಯ ವೇಳೆ ಎರಡೂ ಪಕ್ಷಗಳಿಂದ ಬಂದ ಚುನಾವಣೆಗೆ ಸ್ಪರ್ಧೆ ಮಾಡುವ ಆಫರ್‌ಗಳಲ್ಲಿ ಯಾವುದಾದರೂ ಒಂದನ್ನು ಸಂತೋಷದಿಂದ ಸ್ವೀಕಾರ ಮಾಡುತ್ತಿದೆ. ನಾನು ರಾಜಕೀಯಕ್ಕೆ ನಿಲ್ಲಲೇಬೇಕು ಅನ್ನೋದಾಗಿದ್ದರೆ, ಯಾವುದೇ ಪಕ್ಷದಿಂದ ಟಿಕೆಟ್ ಪಡೆಯಲು ನನ್ನ ಕ್ಷೇತ್ರದಲ್ಲಿನ ಸಾಧನೆಗಳು ಸಾಕಾಗಿದ್ದವು. ಮುಕ್ತವಾಗಿ ಅಭಿಪ್ರಾಯಗಳನ್ನು ಹೇಳುವುದು ಬೇರೆ,  ರಾಜಕೀಯ ಆಕಾಂಕ್ಷೆ ಬೇರೆ. ನನ್ನ ಆಸಕ್ತಿ ಮಾತ್ರ “ಭಾರತ್” . 

ವಿರೋಧ ಪಕ್ಷದವರು ತಮ್ಮನ್ನು I.N.D.I.A ಎಂದು ಕರೆದುಕೊಳ್ಳುವುದಾದರೆ, ಅವರು ತಮ್ಮನ್ನು B.H.A.R.A.T ಎಂದೂ ಕೂಡ ಕರೆದುಕೊಳ್ಳಬಹುದು, ಅದಕ್ಕೆ ಸೂಕ್ತವಾದ ಪೂರ್ಣ ರೂಪಗಳನ್ನು ಸೂಚಿಸುವ ಅನೇಕ ಸೃಜನಶೀಲ ವ್ಯಕ್ತಿಗಳೂ ಆ ಒಕ್ಕೂಟದಲ್ಲಿದ್ದಾರೆ.  ಕಾಂಗ್ರೆಸ್ ಕೂಡ ಭಾರತ್ ಜೋಡೋ ಯಾತ್ರೆ ಎಂಬ ಯಾತ್ರೆಯನ್ನು ನಡೆಸಿತ್ತು. ದುರದೃಷ್ಟವಶಾತ್ ಅನೇಕ ಜನರು “ಭಾರತ್” ಪದದ ಬಗ್ಗೆ ಅಸುರಕ್ಷಿತ ಭಾವನೆ ಹೊಂದಿದ್ದಾರೆ. ನನ್ನ ದೃಷ್ಟಿಯಲ್ಲಿ, ಮೈತ್ರಿಯ ಹೆಸರು ಏನೇ ಇರಲಿ, ಮೋದಿ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಚುನಾವಣೆ ಎಂದು ಲೇಬಲ್ ಮಾಡಲಾಗುತ್ತದೆ. ಉತ್ತಮವಾದವರು ಗೆಲ್ಲಲಿ. “ಭಾರತ್” ಎಂಬ ಹೆಸರಿನಿಂದ ನಮ್ಮನ್ನು ರಾಷ್ಟ್ರವೆಂದು ಸಂಬೋಧಿಸಿದರೆ ಅದು ನನಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ ಎಂದು ಸೆಹ್ವಾಗ್‌ ಬರೆದಿದ್ದಾರೆ.

ಇನ್ನು ವೀರೇಂದ್ರ ಸೆಹ್ವಾಗ್‌ ಮಾತ್ರವಲ್ಲದೆ, ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಛನ್‌, ನಟಿ ಕಂಗನಾ ರಾಣಾವತ್‌ ಕೂಡ ಭಾರತ್‌ ಎನ್ನುವ ಹೆಸರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸತ್‌ನ ವಿಶೇಷ ಅಧಿವೇಶನ ಸೆ. 18 ರಿಂದ 22ರವರೆಗೆ ನಡೆಯಲಿದೆ. ವಿಶೇಷ ಅಧಿವೇಶನ ನೂತನ ಸಂಸತ್‌ ಭವನದಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ವೀರೇಂದ್ರ ಸೆಹ್ವಾಗ್ ಅವರು ಬ್ರಿಟಿಷ್ ಗೇಮ್ ಕ್ರಿಕೆಟ್ ಆಡುವ ಮೂಲಕ ಜನಪ್ರಿಯರಾಗಿದ್ದರು. ಅದರಿಂದಲೇ ತಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಿಸಿಕೊಂಡರು. ದೇಶವನ್ನು ಇಂಡಿಯಾ ಹೆಸರಿನಿಂದಲೇ ಪ್ರತಿಧಿನಿಸಿ ಲಕ್ಷಾಂತರ ಹಣ ಗಳಿಕೆ ಮಾಡಿದರು. ಇಂದು, ನಾವು ಬ್ರಿಟಿಷರನ್ನು ಎಲ್ಲಾ ಅಂಶಗಳನ್ನು ತೊಡೆದುಹಾಕಬೇಕು ಎನ್ನುತ್ತಾರೆ. ಜೆರ್ಸಿ ಮೇಲೆ ಇಂಡಿಯಾ ಎನ್ನುವ ಹೆಸರಿದ್ದಾಗ ತಾವು ಎಂದೂ ಹೆಮ್ಮೆ ಪಡಲಿಲ್ಲ ಎನ್ನುವ ಅವರು, ಭಾರತ ಎನ್ನುವ ಹೆಸರಿದ್ದರೆ ಹೆಮ್ಮೆ ಸಿಗುತ್ತದೆ ಎಂದಿದ್ದಾರೆ. ಇಂತಹ ಕೃತಜ್ಞತೆಯಿಲ್ಲದ, ಬೆನ್ನುಮೂಳೆಯಿಲ್ಲದ ಮತ್ತು ಆಲೋಚನೆಯಿಲ್ಲದ ಸೆಲೆಬ್ರಿಟಿಗಳು ಈ ರಾಷ್ಟ್ರಕ್ಕೆ ದೊಡ್ಡ ಶಾಪ’ ಎಂದು ರೋಶನ್‌ ರೈ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

Share
WhatsApp
Follow by Email